ಹೆಸರಾಂತ ನಿರ್ಮಾಪಕ ಕೆ.ಮಂಜು ಹಲವಾರು ಹೊಸ ಸಂಗತಿಗಳೊಂದಿಗೆ ಸಿದ್ಧವಾಗುತ್ತಿರುವ ’ಗಾಡ್ ಫಾದರ್’ ೫೦ ಲಕ್ಷದ ಮನೆಯ ಸೆಟ್ನಲ್ಲಿ ೧೫ ದಿನಗಳ ಚಿತ್ರೀಕರಣ ಮುಗಿಸಿ ಶೇಕಡ ೨೦ರಷ್ಟು ಕ್ಯಾಮರಾದಲ್ಲಿ ತುಂಬಿಸಿಕೊಳ್ಳುವುದಕ್ಕೆ ಒಟ್ಟಾರೆ ಒಂದು ಕಾಲು ಕೋಟಿಯಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಈ ಚಿತ್ರದಲ್ಲಿ ವೈಭವದಿಂದ ನಿರ್ಮಿಸಿರುವ ಮನೆಯೂ ಒಂದು ಪಾತ್ರವಾಗಿ ಕಾಣಿಸಿಕೊಳ್ಳಲಿದೆ ಎನ್ನುತ್ತಾರೆ ಮಂಜು. ಕಲಾ ನಿರ್ದೇಶಕ ಇಸ್ಮಾಯಿಲ್ ಜೊತೆಗೆ ವಾಸುದೇವ್ ಹಾಗೂ ನರಸಿಂಹ ಈ ಮನೆಯ ವಿನ್ಯಾಸವನ್ನು ಮಾಡಿದರೆ ಚೆನೈನಿಂದ ಮೇಸ್ತ್ರಿ ಶಂಕರ್ ತಂಡವು ಈ ಮನೆಯ ನಿರ್ಮಾಣಕ್ಕೆ ಕೆಲಸ ಮಾಡಿದೆ. ಇದೇ ಮನೆಯಲ್ಲಿ ಬೃಹತ್ತಾದ ಬೆಡ್ರೂಂ ಸೆಟ್ ಸಹ ನಿರ್ಮಾಣವಾಗಲಿದ್ದು ಅಲ್ಲಿ ಒಂದು ಭರ್ಜರಿ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಲಾಗುವುದು.
ನಿರ್ಮಾಪಕ ಕೆ.ಮಂಜು ಪ್ರಕಾರ ಮುಂದಿನ ಭಾಗದ ಚಿತ್ರೀಕರಣ ನಾಯಕಿಯ ಮನೆಯಲ್ಲಿ ಅನಂತರ ಮಡಿಕೇರಿಯಲ್ಲಿ ಇನ್ನಷ್ಟು ಭಾಗದ ಚಿತ್ರೀಕರಣ ನಡೆಸಲಾಗುವುದು.
ಈ ಚಿತ್ರದ ಮುಖಾಂತರ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಆಗಮನವಾಗಿದೆ. ಸದ್ಯದಲ್ಲೇ ಅವರು ೬ ಹಾಡುಗಳ ಸಂಯೋಜನೆಯನ್ನು ನೀಡಲಿದ್ದಾರೆ. ಅದಕ್ಕಾಗಿ ೬ ಚಿತ್ರ ಸಾಹಿತಿಗಳು ತಲಾ ಒಂದು ಗೀತೆಯನ್ನು ಈ ’ಗಾಡ್ ಫಾದರ್’ ಚಿತ್ರಕ್ಕಾಗಿ ನೀಡಲಿದ್ದಾರೆ. ಉಪೇಂದ್ರ, ಕವಿರಾಜ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಡಾ. ನಾಗೇಂದ್ರ ಪ್ರಸಾದ್ ಹಾಗೂ ಕಲ್ಯಾಣ್ ಅವರನ್ನು ಕೆ.ಮಂಜು ಸಂಪರ್ಕಿಸಿ ಸಾಹಿತ್ಯವನ್ನು ಪಡೆದುಕೊಳ್ಳುವ ಆಲೋಚನೆಯಲ್ಲಿದ್ದಾರೆ.
ಸೂಪರ್ ಸ್ಟಾರ್ ಉಪೇಂದ್ರ ದ್ವಿತೀಯ ಬಾರಿ ತ್ರಿಪಾತ್ರಗಳನ್ನು ಮಾಡುತ್ತಿರುವ ಬಹು ಕೋಟಿ ವೆಚ್ಚದ ಚಿತ್ರಕ್ಕೆ ಉಪೇಂದ್ರ ಅವರೇ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಬೇಕಾದ ಉಡುಗೆ ತೊಡುಗೆಗಳನ್ನು ಹಾಂಗ್ ಕಾಂಗ್ನಿಂದ ತರಿಸಲಾಗುತ್ತಿದೆ.
ಈಗಾಗಲೇ ಅನೇಕ ಚಿತ್ರಗಳನ್ನು ಬಿಡುಗಡೆ ಹಂತಕ್ಕೆ ತಂದುಕೊಂಡಿರುವ ನಿರ್ಮಾಪಕ ಕೆ.ಮಂಜು ರಾಷ್ಟ್ರಖ್ಯಾತಿ ಛಾಯಾಗ್ರಾಹಕ ಶ್ರೀರಾಮ್ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಡಾ. ಜಯಮಾಲ ಪುತ್ರಿ ಸೌಂದರ್ಯ ಮೊದಲ ಬಾರಿಗೆ ನಾಯಕಿಯಾಗುತ್ತಿದ್ದಾರೆ. ರಮೇಶ್ ಭಟ್, ರವೀಂದ್ರ ಹಾಗೂ ಇನ್ನು ಅನೇಕರು ತಾರಾಗಣದಲ್ಲಿದ್ದಾರೆ.